ಬಂಟ್ವಾಳ : ಸದಾಶಿವ ಶಿಕ್ಷಣ ಪ್ರತಿಷ್ಠಾನ (ರಿ) ಬಂಟ್ವಾಳ, ಇದರ ನೂತನ ವಿದ್ಯಾಸಂಸ್ಥೆಯ ಲಾಂಛನ ಬಿಡುಗಡೆ ಮತ್ತು ನಾಮಕರಣ ಸಮಾರಂಭವು ಅ. 22ರಂದು ಬುಧವಾರ ಬೆಳಿಗ್ಗೆ ಬಂಟ್ವಾಳ ತಾಲೂಕಿನ ಬೆಂಜನಪದವು ಶುಭಲಕ್ಷ್ಮಿ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಓಡಿಯೂರು ಇವರು ಆಶೀರ್ವಾಚನ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ ರಮಾನಾಥ ರೈ ಸಹಿತ ಅನೇಕ ಗಣ್ಯರು ಉಪಸ್ಥಿತರಿರುವರು.


ಪ್ರಕೃತಿ ರಮಣೀಯ ಪರಿಸರದಲ್ಲಿ ಪಿ ಯು ಕಾಲೇಜು ಪ್ರಾರಂಭ:
ಸದಾಶಿವ ಶಿಕ್ಷಣ ಪ್ರತಿಷ್ಠಾನ ರಿ ಇದರ ಅಧ್ಯಕ್ಷರಾದ ಅಮೃತ್ ರೈ ಯು ಇವರ ಸಮರ್ಥ ನೇತೃತ್ವದಲ್ಲಿ ಅನುಭವಿ ಶಿಕ್ಷಕರು ಮತ್ತು ಶಿಕ್ಷಣ ಉತ್ಸಾಹಿಗಳು ಜೊತೆಯಾಗಿ ನಿರ್ಮಿಸಿರುವ ವಿಭಿನ್ನ ವಿಶೇಷತೆಗಳನ್ನು ಒಳಗೊಂಡಿರುವ ಅತ್ಯಂತ ಸುಸಜ್ಜಿತ ಪಿಯು ಕಾಲೇಜು ಶೀಘ್ರದಲ್ಲಿ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆಯಲ್ಲಿ ಆರಂಭಗೊಳ್ಳಲಿದ್ದು ಇದರ ಪೂರ್ವಸಿದ್ಧತಾ ಕಾರ್ಯಕ್ರಮ ಇದಾಗಿದೆ.
ನಿಸರ್ಗ ಸಹಜ ಸೌಂದರ್ಯದ ಪ್ರದೇಶವಾಗಿರುವ ಮತ್ತು ಹಲವಾರು ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನುಗೈದ ಪ್ರತಿಭೆಗಳನ್ನು ದೇಶಕ್ಕೆ ಕಾಣಿಕೆಯಾಗಿ ನೀಡಿದ ಬಂಟ್ವಾಳ ತಾಲೂಕಿನಲ್ಲಿ ಅದ್ಭುತ ಸಂಸ್ಥೆಯು ಸ್ಥಾಪನೆ ಗೊಳ್ಳುತ್ತಿರುವುದು ಈ ಕ್ಷೇತ್ರದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ಇಲ್ಲಿ ನಿರ್ಮಿಸಲ್ಪಡುವ ಈ ಸಂಸ್ಥೆಯು ಹಲವಷ್ಟು ವೈಶಿಷ್ಟ್ಯಗಳನ್ನು ಹೊಂದಲಿದ್ದು, ಅತ್ಯಾಧುನಿಕ ಶಿಕ್ಷಣಕ್ಕೆ ಪೂರಕವಾಗುವಂತಹ ಮತ್ತು ಸರ್ವ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದೇ ಸೂರಿನಡಿ ತರಬೇತಿ ಪಡೆಯುವಂತಹ ವ್ಯವಸ್ಥೆಗಳನ್ನು ನಿರ್ಮಿಸಲಾಗಿದೆ. ಸಂಸ್ಥೆಯ ಸಂಪೂರ್ಣ ಮಾಹಿತಿ ಮತ್ತು ವಿಭಿನ್ನತೆಯನ್ನು ಈ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಿದ್ದು ಸಾರ್ವಜನಿಕರು, ವಿದ್ಯಾಸಕ್ತರು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸುವಂತೆ ಸದಾಶಿವ ಶಿಕ್ಷಣ ಪ್ರತಿಷ್ಠಾನ, ಬಂಟ್ವಾಳ ಇದರ ಅಧ್ಯಕ್ಷರಾದ ಅಮೃತ್ ರೈ ಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



